Restoration of temples in Hudikeri. ಹುದಿಕೇರಿಯಲ್ಲಿ ದೇವಸ್ಥಾನಗಳ ಜೀರ್ಣೋದ್ದಾರ
ದೊಡ್ಡ ಮಟ್ಟದ ಅಭಿವೃದ್ಧಿ ಕಾರ್ಯಗಳು ಬಾಕಿ ಉಳಿದಿರುವ ಹುದಿಕೇರಿ ಪಂಚಾಯ್ತಿ ವ್ಯಾಪ್ತಿಯ ಬೇಗೂರು ಗ್ರಾಮದ ವಿಷ್ಣು ದೇವಸ್ಥಾನಕ್ಕೆ ಭೇಟಿ ನೀಡಿ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರೊಂದಿಗೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಿ ಆಗಬೇಕಾದ ಅಭಿವೃದ್ಧಿ ಕೆಲಸಗಳ ಬಗ್ಗೆ ವಿವರ ಪಡೆದೆ. ಈ ಬಗ್ಗೆ ಮುಂದಿನ ದಿನದಲ್ಲಿ ನನ್ನ ಕೈಲಾದ ಮಟ್ಟಿಗೆ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸುವುದಾಗಿ ಭರವಸೆ ನೀಡಿದ್ದೇನೆ.
ಅದೇ ರೀತಿ, ಬೃಹದಾಕಾರದ ಮರ ಬಿದ್ದು ಹಾನಿಗೊಳಗಾಗಿರುವ ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೆ ಇರುವ ಬೇಗೂರು ಚೇನಿವಾಡ ಗ್ರಾಮದ ಚಾವುಂಡಿ ದೇವಸ್ಥಾನಕ್ಕೆ ಭೇಟಿ ನೀಡಿ ದುರಸ್ತಿ ಕಾರ್ಯದ ವಿವರ ಪಡೆದೆ.ಸ್ಥಳದಲ್ಲಿಯೇ ದೇವಸ್ಥಾನದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯವರಿಗೆ ನನ್ನ ಕಡೆಯಿಂದ ದುರಸ್ತಿ ಕೆಲಸಕ್ಕೆ ನನ್ನ ಕೈಲಾದ ಹಣವನ್ನು ನೀಡಿದ್ದೇನೆ. ಆದಷ್ಟು ಬೇಗ ದುರಸ್ತಿ ಕಾರ್ಯ ಪೂರ್ಣಗೊಂದು ದೇವಸ್ಥಾನ ತನ್ನ ಹಿಂದಿನ ಸ್ಥಿತಿಗೆ ತಲುಪಲಿ. ಎರಡೂ ಕಡೆ ದೇವರ ದರ್ಶನ ಪಡೆದು ಕೊಡಗಿನ ಒಳಿತಿಗೆ ಪ್ರಾರ್ಥಿಸಿದೆ.
Felicitating meritorious students. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ವಿರಾಜಪೇಟೆಯಲ್ಲಿ ನಡೆದ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಂದರ್ಭ.
ನಾವು ಶಾಲೆ ಕಾಲೇಜುಗಳಲ್ಲಿ ಕಳೆಯುವ ವರ್ಷಗಳು ನಮ್ಮ ಜೀವನವನ್ನು ರೂಪಿಸುವ ಅತಿಮುಖ್ಯ ಘಟ್ಟ. ಈ ಸಮಯವನ್ನು ಆದಷ್ಟು ಸದುಪಯೋಗ ಮಾಡಿಕೊಂಡು ನಮ್ಮ ಜೀವನ ಮಾತ್ರವಲ್ಲದೆ, ನಮ್ಮ ಕುಟುಂಬ ಹಾಗು ಸಮಾಜಕ್ಕೆ ಒಳ್ಳೆಯ ಕೊಡುಗೆ ನಾವು ಕೊಡಬಹುದು.
ಪ್ರತಿಭಾ ಪುರಸ್ಕಾರ 2022 ಆಯೋಜಕರಿಗೂ, ಸನ್ಮಾನ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೂ ಅಭಿನಂದನೆಗಳು. ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಿರಲೆಂದು ಹಾರೈಸುತ್ತೇನೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಚುನಾಯಿತರಾಗಿ ಅಧಿಕಾರ ವಹಿಸಿಕೊಂಡಿರುವ ನಮ್ಮ ಹಿರಿಯ ನಾಯಕರಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಮಾಡಿ ಅಭಿನಂದಿಸಿದ ಸಂದರ್ಭ. ಅವರ ಸುದೀರ್ಘ ರಾಜಕೀಯ ಅನುಭವದ ಮಾರ್ಗದರ್ಶನದಲ್ಲಿ ಪಕ್ಷ ಇನ್ನಷ್ಟು ಬಲಿಷ್ಠ ಆಗುವುದರಲ್ಲಿ ಅನುಮಾನವಿಲ್ಲ. ಎಲ್ಲರಿಗೂ ಪ್ರೇರಣೆಯಂತಿರುವ ಶ್ರೀ ಖರ್ಗೆಯವರಿಗೆ ಮತ್ತೊಮ್ಮೆ ಅಭಿನಂದನೆಗಳು.
Pledge to donate eyes and organs. ದಾನ ಮಾಡುವುದೇ ಮನುಷ್ಯತ್ವ
ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ಅವರ ಮೊದಲ ವರ್ಷದ ಪುಣ್ಯಸ್ಮರಣೆ ಮತ್ತು ಮಡಿಕೇರಿಯ ದಿ. ಪಂದ್ಯಂಡ ಆಶಾ ಗಣಪತಿ ಅವರುಗಳ ಸ್ಮರಣಾರ್ಥ ಅಂಗಾಂಗಗಳ ದಾನಮಾಡುವ ಪ್ರೇರೇಪಣಾ ಕಾರ್ಯಕ್ರಮದಲ್ಲಿ ಭಾಗಿಯಾದ ಸಂದರ್ಭ.
ಈ ಕಾರ್ಯಕ್ರಮದಲ್ಲಿ 25 ಜನ ನೇತ್ರದಾನ ಮಾಡಲು ಮತ್ತು ಎಂಟು ಮಂದಿ ದೇಹದಾನ ಮಾಡಲು ನೋಂದಾಯಿಸಿಕೊಂಡಿದ್ದು ಹೆಮ್ಮೆಯ ಸಂಗತಿ. ಸ್ಥಳದಲ್ಲೇ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ 14 ಜನ ರಕ್ತದಾನ ಕೂಡ ಮಾಡಿದ್ದಾರೆ.
ದಾನ ಮಾಡುವುದು ಮನುಷ್ಯನ ಸಹಜ ಗುಣ. ಬದುಕಿದ್ದಾಗ ಹಣವಾಗಲಿ, ಸತ್ತ ನಂತರ ನಮ್ಮ ದೇಹದ ಅಂಗಾಂಗಗಳನ್ನಾಗಲಿ ದಾನ ಮಾಡುವುದು ಶ್ರೇಷ್ಠ ಗುಣ. ಇದೊಂದು ಪುಣ್ಯದ ಕೆಲಸವೆಂದೇ ನನ್ನ ಭಾವನೆ.
ಲಯನ್ಸ್ ಸಂಸ್ಥೆ ಸತತವಾಗಿ ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಾ ಬಂದಿದೆ. ಕರ್ನಾಟಕ ದಲಿತ ಸಂಘರ್ಷ ಸಮಿತಿಯವರು ಇವರ ಜೊತೆಗೂಡಿ ಮಡಿಕೇರಿಯಲ್ಲಿ ಆಯೋಜಿಸಿದ್ದ ಈ ಯಶಸ್ವಿ ಕಾರ್ಯಕ್ರಮಕ್ಕೆ ಅಭಿನಂದನೆಗಳು.